ಅನಕೃ: ಒಂದು ನೆನಪು


ರಕಲಗೂಡು ರಸಿಂಗರಾಯ ಕೃಷ್ಣರಾಯರು (ಜನನ ಕೋಲಾರ ಮೇ ೯, ೧೯೦೮ ಮರಣ ಬೆಂಗಳೂರು ಜುಲೈ ೮, ೧೯೭೧) ಈ ಶತಮಾನದ ಕರ್ನಾಟಕದ ಪವಾಡಪುರುಷ! ಅವರು ರಚಿಸಿದ ಸಾಹಿತ್ಯ ೮೦,೦೦೦ ಪುಟಕ್ಕೂ ಮೇಲ್ಪಟ್ಟಿದ್ದು; ಮಾಡಿದ ಭಾಷಣಗಳು ಲೆಕ್ಕವಿಲ್ಲದಷ್ಟು; ಅವರಿಂದ ಪ್ರಭಾವಿತರಾದವರು, ಮುಂದೆ ಬಂದವರು ಅನೇಕರು; ಅವರ ಕನ್ನಡ ಸೇವೆ, ಕೃತಜ್ಞನಾದ ಕನ್ನಡಿಗ ಋಣ ತೀರಿಸಲಾರದಷ್ಟು. ಅನಕೃ ತಮ್ಮ ಜೀವಿತಾವಧಿಯಲ್ಲಿ ತಮ್ಮ ಪ್ರತಿಭೆ, ಸಾಹಿತ್ಯ, ಕನ್ನಡಪ್ರೇಮ, ಮಾತುಗಾರಿಕೆಗಳಿಂದ ಕನ್ನಡಿಗರ ಮೇಲೆ ಮೋಡಿ ಮಾಡಿದ್ದರು. ೧೯೩೦ ರಿಂದ ೧೯೭೧ ರವರೆಗೆ, ನಾಲ್ಕು ದಶಕಗಳ ಕಾಲ ಅನಕೃ ಕರ್ನಾಟಕದ ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕದ ಅನಭಿಷಿಕ್ತ ದೊರೆ ಯಂತೆ ಜೀವಿಸಿದ್ದರು.

ಅನಕೃ ಕನ್ನಡ ಸಾರಸ್ವತಲೋಕವನ್ನು ಪ್ರವೇಶಿಸಿದ ಕಾಲ, ಕನ್ನಡ ಪುಸ್ತಕಗಳೇ ಮಾರಾಟವಾಗದ ಕಾಲ. ಆಗ ಕನ್ನಡದಲ್ಲಿ ಇದ್ದುದು ಓದಿದರೂ ತಿಳಿಯದ ಕಬ್ಬಿಣದ ಕಡಲೆಯಂತಹ ಶಾಸ್ತ್ರೀಯ, ಪೌರಾಣಿಕ ವಸ್ತುವನ್ನಾಧರಿಸಿದ ಗ್ರಂಥಗಳು. ವಾದಿಸಮನಾಂತನಾಮವನಾದಾತಂ ಅಳೆದುದೇಂ (ವಾ ಆದಿಯಲ್ಲಿರುವ ದಿಂದ ಕೂಡಿದ ಅಂತ್ಯದಲ್ಲಿರುವವನ ಹೆಸರಿನವನು ಅಳೆದುದು ಏನು) ಎಂಬ ಒಗಟೇ ಸಾಹಿತ್ಯದ ಜೀವಾಳವೆಂದು ನಂಬಿದ್ದ ಕಾಲ ಅದು. ಆ ಕಾಲದ ಓದುಗರನ್ನು ಅಂಥ ಬಂಧನದಿಂದ ಬಿಡಿಸಿದವರು ಅನಕೃ. ಜೀವನಯಾತ್ರೆ, ಉದಯರಾಗ, ಸಂಧ್ಯಾರಾಗ, ಮಂಗಳಸೂತ್ರ, ನಟಸಾರ್ವಭೌಮ, ಸಾಹಿತ್ಯರತ್ನ, ತಾಯಿಯ ಕರುಳು, ಗೃಹಲಕ್ಷ್ಮಿ, ರುಕ್ಮಿಣಿ, ತಾಯಿ ಮಕ್ಕಳು, ಆಶೀರ್ವಾದ ಮತ್ತು ಅನುಗ್ರಹ ಮುಂತಾದ ಅತ್ಯಂತ ಜನಪ್ರಿಯವಾದ ಕೃತಿಗಳನ್ನು ರಚಿಸಿ ಕನ್ನಡ ನಾಡಿನಾದ್ಯಂತ ಕಾದಂಬರಿ ಸಾರ್ವಭೌಮ ಎನಿಸಿದರು. ಅನಕೃ ತಮ್ಮ ಕಾಲದಲ್ಲಿ ಮಾಡಿದ್ದು ಒಂದು ಕ್ರಾಂತಿ! ಅನಕೃ ಕೋಣೆಯ ಒಂದು ಮೂಲೆಯಲ್ಲಿ ಕುಳಿತು, ಕಿಟಕಿ ಪರದೆ ಮುಚ್ಚಿ, ಪಂಡಿತರು ಮಾತ್ರ ಮೆಚ್ಚಬಲ್ಲ ಗ್ರಂಥಗಳನ್ನು ಸೃಷ್ಟಿಸಲಿಲ್ಲ. ಅವರ ಗುರಿ ಜನಸಾಮಾನ್ಯರನ್ನು ತಲುಪುವುದಾಗಿತ್ತು. ಮೊದಲು ಜನರಿಗೆ ಕನ್ನಡ ಪುಸ್ತಕಗಳನ್ನು ಓದುವ ಚಟ ಹಿಡಿಸಬೇಕಾಗಿತ್ತು. ಇದರಲ್ಲಿ ಅನಕೃ ಜಯಶಾಲಿಯಾದರು. ಅಂದು ಅನಕೃ ಕೃತಿಗಳ ಅಸಂಖ್ಯಾತ ಓದುಗರಲ್ಲಿ ಕಾರ್ಮಿಕರು, ಹೋಟೆಲ್ ಮಾಣಿಗಳು ಇದ್ದರು. ಅನಂತರದ್ದು ಸಮಾಜ ಸುಧಾರಣೆ: ವೇಶ್ಯಾಸಮಸ್ಯೆಗೆ ಸಂಬಂಧಿಸಿದ ನಗ್ನಸತ್ಯ, ಶನಿಸಂತಾನ, ಸಂಜೆಗತ್ತಲು ಬರೆದಾಗ ಸನಾತನಿಗಳು, ಧರ್ಮರಕ್ಷಕರು ಅವನ್ನು ಓದಿ ಉರಿದೆದ್ದರು. ಅಂತಹ ವಸ್ತುವಿನ ಬಗ್ಗೆ ಬರೆದ ಅನಕೃ ಅವರನ್ನು "ಅಶ್ಲೀಲ ಸಾಹಿತಿ" ಎಂದು ಜರೆದರು. “ಸತ್ಯ ಹೇಳುವುದು ಅಶ್ಲೀಲವಾದರೆ ನಾನು ಅಶ್ಲೀಲ ಸಾಹಿತಿ; ಪತಿತೆಗೆ ಮರುಕ ತೋರುವುದು ಅಶ್ಲೀಲವಾದರೆ ನಾನು ಅಶ್ಲೀಲ ಸಾಹಿತಿ; ಬೀದಿಯಲ್ಲಿ ಕ್ಷುದ್ಭಾದೆಯಿಂದ ವಿವಸ್ತ್ರಳಾಗಿ ಬಿದ್ದಿರುವ ಒಬ್ಬ ಅಸಹಾಯಕ ಹೆಣ್ಣಿಗೆ ವಸ್ತ್ರ ಹೊದಿಸುವುದು ಅಶ್ಲೀಲವಾದರೆ ನಾನು ಅಶ್ಲೀಲ ಸಾಹಿತಿ” ಎಂಬುದು ಅನಕೃ ಉತ್ತರವಾಗಿತ್ತು. ಸೋಜಿಗವೆಂದರೆ ಯಾವ ವಿಚಾರಗಳಿಗಾಗಿ ಅನಕೃ ಟೀಕೆಗೊಂಡರೋ ಅವೇ ಇಂದು ಪ್ರಧಾನವಾಗಿವೆ. ಶಾಸ್ತೀಯವೆಂದು ಪರಿಗಣಿಸಲ್ಪಟ್ಟಿವೆ.

ಅನಕೃ ತಾವು ಬರೆದುದರ ನೂರು ಪಟ್ಟು, ಭಾಷಣ ಮಾಡಿದರು. ಅನಕೃ ಸಿದ್ಧ ಪ್ರಸಿದ್ಧ ವಾಗ್ಮಿ. ಅವರು ಯಾವುದೇ ವಿಶ್ವವಿದ್ಯಾನಿಲಯದ ಪದವಿ ಪಡೆದವರಲ್ಲ. ಆದರೆ ಪದವೀಧರರನ್ನು ಬೆರಗುಗೊಳಿಸುವ ವಾಕ್ಚಾತುರ್ಯ ಅವರಿಗಿತ್ತು. ಅವರು ಭಾಷಣಕ್ಕೆ ನಿಂತರೆ ಸಾಕು, ಶಬ್ದಗಳು ಪುಂಖಾನುಪುಂಖವಾಗಿ ಸಿಂಹಗರ್ಜನೆಯಲ್ಲಿ ಹೊರಬರುತ್ತಿದ್ದವು. ಯಾವುದೇ ಪೂರ್ವಸಿದ್ಧತೆಯಿಲ್ಲದೆ - ಅದು ಯಾವುದೇ ವಿಷಯವಿರಲಿ; ಆಧುನಿಕ ಭಾರತ ಅಥವಾ ಪರದೇಶಗಳ ವಿದ್ಯಮಾನಗಳ ಬಗ್ಗೆ; ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆಯ ಬಗ್ಗೆ; ಕನ್ನಡ, ಕರ್ನಾಟಕದ ಸಮಸ್ಯೆ, ಪರಿಹಾರಗಳ ಬಗ್ಗೆ; ವೀರಶೈವ ಸಾಹಿತ್ಯದ ಬಗ್ಗೆ; ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ - ಅಧಿಕಾರಯುಕ್ತವಾಗಿ, ಗಂಟೆಗಟ್ಟಲೆ, ತಡೆಯಿಲ್ಲದೆ, ನಿರರ್ಗಳವಾಗಿ ಕನ್ನಡ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರು. ಇವರ ಭಾಷಣ ಕೇಳಿದ ಕೆಲ ಮರಾಠಿಗರು, ‘ಕನ್ನಡವು ಇಷ್ಟೊಂದು ಸರಾಗ, ಶ್ರೀಮಂತ ಭಾಷೆಯೇ’ ಎಂದು ಉದ್ಗರಿಸಿದುದೂ ಉಂಟು. ಶ್ರೀಸಾಮಾನ್ಯನಿಗೂ ಅರ್ಥವಾಗುವ ವೈಖರಿ. ಆ ಸಿಡಿಲ ನುಡಿಯಲ್ಲಿ ಸಂಪ್ರದಾಯದ ವಿರುದ್ಧ ಬಂಡೇಳುವ, ರಾಜಕೀಯದ ವಿರುದ್ಧ ಹೋರಾಡುವ, ಅನ್ಯಾಯದ ವಿರುದ್ಧ ಕಾದಾಡುವ ಕೆಚ್ಚು ಇತ್ತು. ಅನಕೃ ನಿರ್ದಾಕ್ಷಿಣ್ಯರು. ಯಾರನ್ನೂ ನಿಷ್ಕಾರಣವಾಗಿ ಹೊಗಳುವುದಾಗಲಿ, ತೆಗಳುವುದಾಗಲಿ ಅವರಿಗೆ ಸೇರುತ್ತಿರಲಿಲ್ಲ. ಅನಕೃ ಅವರ ಭಾಷಣ ಓತಪ್ರೋತವಾಗಿ ಹರಿದಾಗ ಶ್ರೋತೃಗಳ ಹೃದಯದಲ್ಲಿ ಉತ್ಸಾಹ, ಆನಂದ, ಕೆಚ್ಚೆದೆ, ನಾಡಿನಾಭಿಮಾನದ ಕಾರಂಜಿಗಳು ಪುಟಿಯುತ್ತಿದ್ದುದು ಸ್ವಾಭಾವಿಕ. ಇಲ್ಲಿ ಪ್ರೇಕ್ಷಕನಿಗೆ ಕೇಳಿದಷ್ಟೂ ಕಡಿಮೆ, ಮತ್ತೆ-ಮತ್ತೆ ಕೇಳಬೇಕೆಂಬಾಸೆ, ಲವಲವಿಕೆ. ಅನಕೃ ಅವರ ಭಾಷಣ ಕಲೆ ಅವರ ಪೂರ್ವ ಸಂಸ್ಕಾರ, ಅಪಾರ ಓದು, ಆಳವಾದ ಅಧ್ಯಯನದಿಂದ ಬಂದದ್ದು. ಅನಕೃ ಕೂಪಮಂಡೂಕರಂತೆ ಕೇವಲ ತಮ್ಮ ಸಾಹಿತ್ಯ ರಚನೆಯಲ್ಲೇ ಮುಳುಗಿಹೋಗಲಿಲ್ಲ. ಇತರರು ಬರೆದುದನ್ನು ಸಂಗ್ರಹಿಸಿದರು, ಓದಿದರು. ಅವರ ಭಾಷಣ ಕೇಳಲು ಜನ ಕಿಕ್ಕಿರಿದು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದರು!. ಇಂತಹ ಸಂಗತಿ ಕರ್ನಾಟಕದಲ್ಲಿ ಅನೇಕ ಕನ್ನಡಿಗರು ಕಂಡಿರುವ ಪ್ರಕಾರ ಹಿಂದೆ ನಡೆದಿಲ್ಲ. ಮುಂದೆ ನಡೆಯಬೇಕಾದರೆ ಅನಕೃ ಮತ್ತೊಮ್ಮೆ ಹುಟ್ಟಿಬರಬೇಕು, ಅಷ್ಟೆ. ಇಂತಹ ವಾಗ್ಮಿಯ ಭಾಷಣದ ಧ್ವನಿಸುರುಳಿಗಳು ಈಗ ಲಭ್ಯವಿಲ್ಲದಿರುವುದು ನಮ್ಮ ದುರ್ದೈವ.

ಅನಕೃ ಯಾವ ಸರಕಾರೀ ಅಧಿಕಾರದಲ್ಲಿದ್ದವರಲ್ಲ. ಕೇವಲ ಬರವಣಿಗೆಯಿಂದಲೇ ಜೀವನ ಸಾಗಿಸುತ್ತಿದ್ದವರು. ಆದರೆ ತಮ್ಮ ಕೃತಿಗಳಿಂದ ಗಳಿಸಿದ್ದರಲ್ಲಿ ಬಹು ಪಾಲು, ಕನ್ನಡಿಗರ, ಕನ್ನಡದ ಕೆಲಸಕ್ಕಾಗಿಯೇ ಹರಿದುಹೋಯಿತು. ಅವರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ನಾಡಿನಾದ್ಯಂತ ಸಂಚರಿಸಿ ಕನ್ನಡ ಜಾಗೃತಿಯ ಕೆಲಸ ಮಾಡಿದರು. ಅನಕೃಗೂ ಕನ್ನಡ ಕಲಾವಿದರಿಗೂ ಎಲ್ಲಿಲ್ಲದ ಭಾಂಧವ್ಯ. ಕಲಾವಿದರ ಬಗ್ಗೆ ಅವರಿಗೆ ಆದರವಿತ್ತು, ಕಳಕಳಿಯಿತ್ತು. ದಿನ ನಿತ್ಯ ಕಲಾವಿದರ ಯಾತ್ರೆ ರಾಯರ ಮನೆಗೆ ತಪ್ಪಿದ್ದಲ್ಲ. ನೃತ್ಯಗಾರನಿರಲಿ, ಸಂಗೀತಗಾರನಿರಲಿ, ಸಾಹಿತಿಯಾಗಿರಲಿ, ಪತ್ರಿಕಾಕರ್ತನಾಗಿರಲಿ, ಚಿತ್ರಕಾರನಾಗಿರಲಿ, ನಾಟಕಕಾರನಿರಲಿ, ವಿದ್ಯಾರ್ಥಿಯಿರಲಿ, ಅಧ್ಯಾಪಕನಿರಲಿ, ಪ್ರಕಾಶಕನಿರಲಿ ಯಾರೇ ಬಂದರೂ ಅವರ ಮನೆ “ಅನ್ನಪೂರ್ಣ” ಸ್ವಾಗತಿಸಿ ಸತ್ಕರಿಸುತ್ತಿತ್ತು. ಅನಕೃ ಅನೇಕ ಯುವಪ್ರತಿಭೆಗಳನ್ನು ಹುಡುಕಿದರು, ಹುರಿದುಂಬಿಸಿದರು, ಅವರ ಬಗ್ಗೆ ಬರೆದರು. ಕನ್ನಡದ ಕೆಲಸ ಮಾಡುವರನ್ನು ಕಂಡರೆ ರಾಯರಿಗೆ ಎಲ್ಲಿಲ್ಲದ ಪ್ರೇಮ. ಶ್ರೀರಾಮಚಂದ್ರನನ್ನು ಪೂಜಿಸುವವರನ್ನು ಕಂಡರೆ ಹೆಚ್ಚಿನ ಸಂತೋಷ ಯಾರಿಗೆ? ಹನುಮಂತನಿಗೆ ತಾನೆ, ಅನಕೃ-ಕನ್ನಡ ಸಂಬಂಧ, ಹನುಮಂತ-ರಾಮ ಇವರ ಬಾಂಧವ್ಯದಂತೆ. ಇಂದು ಏಕೀಕೃತ ಕರ್ನಾಟಕದ ಭಾವೈಕ್ಯಪಥದಲ್ಲಿ ಕನ್ನಡಿಗರು ಸಾಗುತ್ತಿದ್ದರೆ; ಅವರಲ್ಲಿ ಬಹುಕಾಲ ಸುಪ್ತವಾಗಿದ್ದ ಸ್ವಾಭಿಮಾನ ಜಾಗೃತವಾಗಿದ್ದರೆ; ಕನ್ನಡ ವಾಚಕರು ಅಗಣಿತವಾಗಿ ಬೆಳೆದಿದ್ದರೆ, ಕನ್ನಡ ಲೇಖಕರು ಗಣನೀಯವಾಗಿ ಹೆಚ್ಚಿದ್ದರೆ, ಕನ್ನಡ ನಾಡಿನ ಕರ್ನಾಟಕ ಸಂಗೀತಗಾರರು ನೆಮ್ಮದಿಯಿಂದಿದ್ದರೆ, ಕನ್ನಡ ಚಲನಚಿತ್ರ ಕಲಾವಿದರು ವೈಭವ ಜೀವನ ನಡೆಸುತ್ತಿದ್ದರೆ; ಒಟ್ಟಿನಲ್ಲಿ ಕನ್ನಡ ಕನ್ನಡಿಗರು ಭಾರತದ-ಅಷ್ಟೇಕೆ ಜಗತ್ತಿನ ದೃಷ್ಟಿಯಲ್ಲಿದ್ದರೆ ಇದಕ್ಕೆಲ್ಲ ಅನಕೃ ಬಹುಮಟ್ಟಿಗೆ ಕಾರಣರೆಂದರೆ ಅತ್ಯುಕ್ತಿಯಲ್ಲ.

ಅನಕೃ ಅವರದು ಕನ್ನಡದ ಬಗ್ಗೆ ಅತಿರೇಕ ವಾದವಲ್ಲ. ಇತರ ಭಾಷಿಕರನ್ನು ಕೀಳಾಗಿ ಕಾಣಬೇಕು, ಇತರರ ಭಾಷೆಗಳಿಗೆ ಬೆಲೆಯೇ ಇಲ್ಲ, ಅವರು ಸಾಮಾನ್ಯರು, ವೈರಿಗಳು ಎಂಬ ನೀಚಭಾವವಾಗಲಿ, ಇತರ ಭಾಷಿಕರನ್ನು ಹಿಂಸಿಸಬೇಕು, ಓಡಿಸಬೇಕು ಎಂಬಂಥ ತತ್ತ್ವವಾಗಲಿ ಅವರ ಕನ್ನಡ ಚಳುವಳಿಯಲ್ಲಿರಲಿಲ್ಲ. ಕನ್ನಡೇತರ ಭಾಷೆಗಳ ದ್ವೇಷವಾಗಲಿ, ಅವುಗಳ ಅಜ್ಞಾನವಾಗಲಿ ಅವರಲ್ಲಿ ಕನ್ನಡ ಪ್ರೇಮವಾಗಿ ಪರಿಣಮಿಸಿರಲ್ಲ. ‘ನಮ್ಮ ನಾಡಿನಲ್ಲಿ ಎಲ್ಲರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಇರಲಿ, ನಮ್ಮ ಮಾತೃಭಾಷೆಯನ್ನು ಮೆಟ್ಟಿ ಮುಂದುವರಿಯುವುದು ತರವಲ್ಲ’ ಎಂಬುದು ಅವರ ಮೂಲತತ್ತ್ವ.

“ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೇ; ಕವಿ ಮಾನವೀಯತೆಯ ಪ್ರವಾದಿ” ಎಂದು ಅನಕೃ ನಂಬಿದ್ದರು. ಅವರು ಕನ್ನಡ ಚಳುವಳಿಗಳಲ್ಲಿ ನಿರತವಾಗಿದ್ದ ಸಮಯದಲ್ಲೇ ನೆರೆ-ಹೊರೆ ರಾಜ್ಯಗಳ ಸಾಹಿತಿಗಳೊಂದಿಗೆ, ಕಲಾವಿದರೊಂದಿಗೆ ಉತ್ತಮ ಸ್ನೇಹ-ಸಂಬಂಧಗಳನ್ನು ಹೊಂದಿದ್ದರು. ಒಮ್ಮೆ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ಭಾಷೆಯಲ್ಲೇ ಭಾಷಣ ಮಾಡುವುದರ ಮೂಲಕ ತಮ್ಮ ಜತೆಯಲ್ಲಿದ್ದ ತಮಿಳು ಕಲಾವಿದರನ್ನು ಚಕಿತಗೊಳಿಸಿದ್ದರು. ಮುಂಬೈನ ರಂಗಕಲಾವಿದರೊಂದಿಗೆ ಅವರಿಗಿದ್ದ ಸ್ನೇಹ, ಪೃಥ್ವಿರಾಜ್ ಕಪೂರ್ ರಂತಹ ಕಲಾವಿದ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಕಾರಣವಾಯಿತು. ರಾಜಕೀಯವಾಗಿಯಾದರೂ ಕನ್ನಡ ನಾಡಿನ ಏಕೀಕರಣವಾಗದಿದ್ದಾಗ ಅನಕೃ ನಾಡಿನ ಮೂಲೆ ಮೂಲೆಗಳಲ್ಲಿ ಸಂಚರಿಸಿದರು. ಜನರ ಸ್ವಾಭಿಮಾನವನ್ನು ಕೆರಳಿಸಿದರು. ಯಾವ ಅಧಿಕಾರವೂ ಇರದಿದ್ದ ಅನಕೃ ಮಾಡಿದ ಈ ಡಂಗುರದ ಕೆಲಸವನ್ನು ಕನ್ನಡಿಗರು ಗುರುತಿಸದಿರುವುದು ಮಾತ್ರ ದುರ್ದೈವದ ಸಂಗತಿಯಾಗಿದೆ. ರಾಷ್ಟ್ರಕ್ಕೆ ಎದುರಾಗಿದ್ದ ಹಿಂದೀ ಅಪಾಯವನ್ನು ಅರ್ಧ ಶತಮಾನಕ್ಕೆ ಮೊದಲೇ ಗುರುತಿಸಿದ ಪ್ರವಾದಿ ಅನಕೃ. ಹಿಂದೀ ಸಾಮ್ರಾಜ್ಯವನ್ನು ಕಟ್ಟುವ ಆತುರದಲ್ಲಿ ಅನೇಕ ನಾಯಕರು ಭಾಷಾ ಪ್ರಾಂತಗಳನ್ನೇ ಅಳಿಸಿ ಬಿಡಬೇಕೆಂದು ತೊದಲುತ್ತಿದ್ದ ಸಮಯದಲ್ಲಿ, ಸಮೃದ್ಧ ಪ್ರಾಂತಗಳಿದಲೇ ಹೇಗೆ ರಾಷ್ಟ್ರೀಯತೆ ಬಲಿಯಬಲ್ಲದೆಂಬುದನ್ನು ಅನಕೃ ಅರ್ಧ ಶತಮಾನದ ಹಿಂದೆಯೇ ವಿವರಿಸಿದರು: "ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತೃವೆಂಬುದನ್ನು ಮರೆಯಬಾರದು. ಆ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲುಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ." ಒಮ್ಮೆ ದೇಶದಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡ ಸಂದರ್ಭದಲ್ಲಿ, ಸಭೆಯೊಂದರಲ್ಲಿ ಕನ್ನಡ ಏಕೀಕರಣ ಚಳುವಳಿಗಾರರಿಗೆ ಹೇಳಿದರು: "ಇಂದು ಪ್ರತಿಯೊಬ್ಬ ಭಾರತೀಯನು ಒಗ್ಗಟ್ಟಾಗಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡುವುದು ಅನಿವಾರ್ಯ. ಈ ಸಮಯದಲ್ಲಿ ಕನ್ನಡ ಚಳುವಳಿ ಸೂಕ್ತವಲ್ಲ. ದೇಶ ಸ್ವತಂತ್ರವಾದಮೇಲೆ ನಮ್ಮ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು". ಅನಕೃ ಅವಕಾಶವಾದಿಯಾಗಿರಲಿಲ್ಲ. ಅವರ ಕನ್ನಡ ಪ್ರೇಮ ಯಾವತ್ತೂ ರಾಷ್ಟ್ರೀಯ ಭಾರತದ ಕಲ್ಪನೆಗೆ ಎರವಾಗಿಲ್ಲ.

ಒಂದು ಕಾಲದಲ್ಲಿ, ಬೆಂಗಳೂರಿನಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲು ಚಿತ್ರಮಂದಿರಗಳೇ ಸಿಗುತ್ತಿರಲಿಲ್ಲ. ಚಿತ್ರಮಂದಿರಗಳನ್ನೆಲ್ಲ ಪರಭಾಷಾ ಚಿತ್ರಗಳಿಗೆ ಕಾಯ್ದಿರಿಸಲಾಗಿರುತ್ತಿತ್ತು. ಕನ್ನಡ ನಿರ್ಮಾಪಕರು, ಹಂಚಿಕೆದಾರರು ಚಿತ್ರಮಂದಿರಗಳ ಮಾಲೀಕರ ಮನೆ ಮುಂದೆ ನಿಂತು ಗೋಗರೆಯಬೇಕಿತ್ತು. ಅನಕೃ ಮತ್ತು ಅವರ ಸಹಚರರ ಕನ್ನಡ ಚಳುವಳಿಯಿಂದ ಬೆಂಗಳೂರಿನ ಚಿತ್ರಮಂದಿರಗಳ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ಅಲಂಕಾರ್ ಚಿತ್ರಮಂದಿರದಲ್ಲಿ ಕನ್ನಡದ ಚಿತ್ರ ಪ್ರದರ್ಶಿತವಾಯಿತು. ಅನಕೃ ಸ್ನೇಹಕ್ಕೆ ಕಟ್ಟುಬಿದ್ದ ಭಾರತ್ ಚಿತ್ರಮಂದಿರದ ಮಾಲೀಕರು ಮುಂದೆ ಬರೀ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಿದರು. ನಂತರ ಬೆಂಗಳೂರಿನ ಉಳಿದ ಚಿತ್ರಮಂದಿರಗಳು ವರ್ಷದಲ್ಲಿ ಕಡ್ಡಾಯವಾಗಿ ಮೂರು ತಿಂಗಳು ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಒಪ್ಪಿಕೊಂಡವು. ಅಂದು ನಮ್ಮ ಗಾಯನ ಸಮಾಜವನ್ನು ನಡೆಸುತ್ತಿದ್ದ ಕನ್ನಡ ಜನರೇ, ಕನ್ನಡ ಸಂಗೀತಗಾರರನ್ನು ಅಲಕ್ಷಿಸಿ ಸಂಗೀತೋತ್ಸವಗಳಿಗೆ ಮದರಾಸಿನಿಂದ ಸಂಗೀತಗಾರರನ್ನು ಕರೆಸುತ್ತಿದ್ದರು. ಕನ್ನಡಿಗರಿಗೆ ಸಂಗೀತ ಬರುವುದಿಲ್ಲ ಎಂಬುದು ಅವರ ವಾದ. ಅನಕೃ ಇದನ್ನು ವಿರೋಧಿಸಿದರು, ಆಗ ಮದರಾಸಿನಿಂದ ಹಾಡಲು ಎಂ. ಎಸ್. ಸುಬ್ಬುಲಕ್ಷ್ಮಿಯವರು ಬಂದಿದ್ದರು. ಆಕೆಗೆ ಅನಕೃ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿ ಹೇಳಿದಾಗ ಸುಬ್ಬುಲಕ್ಷ್ಮಿಯವರು ಒಪ್ಪಿಕೊಂಡು ಸಂಗೀತವನ್ನು ರದ್ದು ಮಾಡಿ ವಾಪಸ್ಸು ಹೋದರು. ಕನ್ನಡಿಗರಿಗೆ ಆಗುವ ಅನ್ಯಾಯದ ವಿರುದ್ಧ ಅನಕೃ ತಮ್ಮ ಜೀವಮಾನದುದ್ದಕ್ಕೂ ಹೋರಾಡಿದ್ದರು.

‘ಕನ್ನಡ, ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಗಳ ಮೇಲೆ ಅಭಿಯೋಗ ನಡೆದಾಗಲೆಲ್ಲ ಇಂದು ಅನೇಕ ಜನರು ಉತ್ತರ ಕೊಡಲು ಮುಂದಾಗುತ್ತಾರೆ. ಆದರೆ ಅವರೆಲ್ಲರಿಗೂ ತಮ್ಮ ಇತಿಮಿತಿಗಳು ಗೊತ್ತು. ಅವರು ಯಾರೇ ಉತ್ತರ ಕೊಟ್ಟರೂ ಅ.ನ.ಕೃಷ್ಣರಾಯರು ಉತ್ತರ ಕೊಟ್ಟಂತೆ ಆಗುವುದಿಲ್ಲ. ‘ಸೂಕ್ತ ಉತ್ತರ’ ಕೊಡಲು ಅನಕೃ ಅವರೊಬ್ಬರೆ ಸಮರ್ಥರಾಗಿದ್ದರು. ಕನ್ನಡ ಹಾಗು ಕರ್ನಾಟಕಗಳ ಶ್ರೇಷ್ಠ ವಕ್ತಾರರಾಗಿದ್ದ ಕೃಷ್ಣರಾಯರು ಈಗ ಇಲ್ಲದಿರುವುದರಿಂದ, ಇನ್ನುಳಿದವರು ಕೊಡುವ ಉತ್ತರಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ, ಪರಮಾವಧಿ ಎಂದರೆ ಶ್ರೇಷ್ಠತೆಯಲ್ಲಿ ದ್ವಿತೀಯ ದರ್ಜೆಗೆ ಹೋಗಿ ಮುಟ್ಟ ಬಹುದು. ಕನ್ನಡ ಭಾಷೆಯೊಂದಿಗೆ, ಕರ್ನಾಟಕದ ವಿಚಾರದೊಂದಿಗೆ, ಕರ್ನಾಟಕದ ಸಂಸ್ಕೃತಿಯೊಂದಿಗೆ ಅವರಂತೆ ಪ್ರೇಮದ ತಾದ್ಯಾತ್ಮ್ಯ ಹೊಂದಿ ಹಾಲಿನಲ್ಲಿ ಸಕ್ಕರೆ ಬೆರೆತಂಥ ಸಮೀಕರಣ ಸಾಧಿಸಿದವರು ಯಾರೂ ಇಲ್ಲ’ ಎಂಬುದು ಬಲ್ಲವರ ಮಾತು.

ಅನಕೃ ಬಗ್ಗೆ ಇಂದಿನ ಕನ್ನಡ ಯುವಪೀಳಿಗೆಗೆ ತಿಳಿದಿರುವುದು ಬಹಳ ಕಡಿಮೆ. ಅನಕೃ ಅತ್ಯಂತ ಪ್ರಭಾವೀ ಬರಹಗಾರರೇ ಅಲ್ಲದೆ ಸ್ನೇಹಮಯಿಯಾಗಿದ್ದರು. ‘ಬರಹಗಾರರು ಸಿಕ್ಕುತ್ತಾರೆ; ಆದರೆ, ಅನಕೃ ಅವರಂತ ಸಂಪೂರ್ಣ ಬರಹಗಾರ ಸಿಕ್ಕುವುದಿಲ್ಲ. ಸ್ನೇಹಿತರು ಸಿಕ್ಕುತ್ತಾರೆ; ಆದರೆ, ಅನಕೃ ಅವರಂತ ನಿರಪೇಕ್ಷ ಸ್ವಭಾವದ ಸ್ನೇಹಿತ ಸಿಕ್ಕುವುದಿಲ್ಲ. ಮಾರ್ಗದರ್ಶಿಗಳೂ ಸಿಕ್ಕುತ್ತಾರೆ; ಆದರೆ, ಅನಕೃ ಅವರಂಥ ಹಿತಚಿಂತಕ ಮಾರ್ಗದರ್ಶಿ ಸಿಕ್ಕುವುದಿಲ್ಲ. ಅಭಿಮಾನಿಗಳೂ ಸಿಕ್ಕುತ್ತಾರೆ; ಆದರೆ, ಅವರಂಥ ಕನ್ನಡದ ಅಭಿಮಾನಿಗಳು ಸಿಕ್ಕುವುದಿಲ್ಲ. ಅನಕೃ ಯಾವಾಗಲೂ ಅವಿಸ್ಮರಣೀಯ. ಕೃಷ್ಣರಾಯರನ್ನು ಬಲ್ಲವರಿಗೆ ನೆನಪುಗಳು ಒಂದೇ? ಎರಡೇ? ಆ ಪ್ರಸಿದ್ಧಿಯ, ಆ ಕೀರ್ತಿಯ, ಆ ಜನಪ್ರಿಯತೆಯ, ಆ ಮಾನವೀಯತೆಯ, ಆ ಹೃದಯ ವೈಶಾಲ್ಯದ ವ್ಯಕ್ತಿಯನ್ನು ತಿಳಿದಿದ್ದವರಿಗೆ ಮಾತ್ರ ಗೊತ್ತು ಆ ನೆನಪುಗಳ ವರ್ಣ ವೈವಿಧ್ಯ. ಇದು ಬರೀ ಬುದ್ಧಿಯ ಮಾತಲ್ಲ; ಹೃದಯದ ಅನುಭವ.’ ಎಂಬುದು ಅನಕೃ ಅವರ ನಿಕಟವರ್ತಿಗಳ ಮಾತು.

ಅನಕೃ ಸಾಧನೆಗಳ ಪಟ್ಟಿ ಗಮನಿಸಿದವರಿಗೆ ಮೊಟ್ಟ ಮೊದಲು ಅನಿಸುವುದು ‘ಇವರಿಗೆ ಇಷ್ಟೊಂದು ಕೆಲಸ ಮಾಡುವುದು ಹೇಗೆ ಸಾಧ್ಯವಾಯಿತು?’ ಎಂದು. ಅಥವಾ ಇದೆಲ್ಲ ದಂತಕಥೆ ಎಂದೂ ಅನಿಸಬಹುದು. ಅವರು ಸಾಮಾಜಿಕ ಕಾರ್ಯದತ್ತ ನಿರ್ಲಕ್ಷಿಸಿ, ನಾಲ್ಕು ಗೋಡೆಗಳ ಮಧ್ಯೆ ತಮ್ಮ ಪಾಡಿಗೆ ತಾವು ಕುಳಿತು, ಕೇವಲ ಸಾಹಿತ್ಯ ಕೃತಿ ನಿರ್ಮಾಣಕ್ಕೆ ಬದುಕು ಮೀಸಲಾಗಿಟ್ಟಿದ್ದರೆ ಇನ್ನೂ ಪ್ರೌಢವಾದ ಕೃತಿಗಳನ್ನು ರಚಿಸುತ್ತಿದ್ದರು. ಆದರೆ ಕನ್ನಡ ಜಾಗೃತಿ ಕಾರ್ಯ ಮಾತ್ರ ಹಿಂದೆ ಬೀಳುತ್ತಿತ್ತು. ಇಂದು ಯಾರು ಏನೇ ಹೇಳಲಿ, ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿಯನ್ನು ಹುಟ್ಟಿಸಿದವರು ಅನಕೃ ಎಂಬುದು ನಿಸ್ಸಂದೇಹ. ಅನಕೃ ನಿಜಜೀವನದ ನಾಯಕ. ಅನಕೃ ವಿಷಯವಾಗಿ ಬರೆಯುವುದು, ಸಾಗರದಿಂದ ಒಂದು ಕೊಡ ನೀರು ತುಂಬಿಕೊಂಡಂತೆ!. ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಅನೇಕ ಮಹನೀಯರು ಹಿಂದೆ ದುಡಿದಿದ್ದಾರೆ, ಇಂದೂ ದುಡಿಯುತ್ತಿದ್ದಾರೆ, ಆದರೆ ಅನಕೃ ತಮ್ಮ ಸಾಧನೆ, ಶ್ರಮಗಳಿಂದ ಎಲ್ಲರಿಗಿಂತ ಮುಂದಿದ್ದಾರೆ. ತಮ್ಮ ೬೩ನೇ ವಯಸ್ಸಿನಲ್ಲಿ ಅನಕೃ ತೀರಿಕೊಂಡಾಗ ನಾಡಿನ ಎಲ್ಲೆಡೆಯಿಂದ ಲಕ್ಷಾಂತರ ಜನರ ಪ್ರವಾಹವೇ ಅವರ ಮನೆಯ ಮುಂದೆ ಅಂತಿಮ ದರ್ಶನಕ್ಕಾಗಿ ನೆರೆದು, ಮೆರಣಿಗೆಯಯಲ್ಲಿ ಪಾಲ್ಗೊಂಡಿತ್ತು. ಆ ಸಂದರ್ಭದಲ್ಲಿ ಸಾಹಿತಿಯೊಬ್ಬರು “ಸಾಹಿತಿಯೊಬ್ಬನಿಗೆ ಇಂತಹ ಗೌರವ ಸಿಗುವುದಾದರೆ ನಾನು ಸಾಯಲು ಇಂದೇ ಸಿದ್ಧ!” ಎಂದು ಉದ್ಗರಿಸಿದ್ದು ಅನಕೃ ಜನಪ್ರಿಯತೆಗೆ ಸಾಕ್ಷಿ.

‘ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ-ಶ್ರೀಸಾಮಾನ್ಯ ಕೂಡಾ ಸಲ್ಲಿಸಬೇಕಾದ ಸೇವೆಯುಂಟು. ಋಣ ತೀರಿಕೆಯೆನ್ನಬಹುದು ಬೇಕಾದರೆ. ಅದನ್ನು ಎಷ್ಟು ಘನತರವಾಗಿ ಮಾಡಿದ್ದಾರೆ ಅನಕೃ! ಒಬ್ಬ ಕೃಷ್ಣರಾಯರು ಸಲ್ಲಿಸಿರುವುದು ನೂರು ಸಾಹಿತಿಗಳ, ನೂರು ಕಲಾವಿದರ, ನೂರು ಜನ ನಾಡು ಕಟ್ಟುವವರ ಸಾಲವನ್ನು. ಒಂದು ಜೀವಮಾನದಲ್ಲೇ ಮಾಡಿರುವುದು ಹಲವು ಜನ್ಮಗಳ ಕೆಲಸ.’ ಎಂಬುದು ಸಮಕಾಲೀನರ ಮಾತು. ಹೀಗೆ ‘ಕನ್ನಡದ ದೀಪಕ್ಕೆ ತೈಲವಾದರು ಅನಕೃ.’ ಒಂದು ಸಭೆಯಲ್ಲಿ ಅವರನ್ನು ಪರಿಚಯ ಮಾಡಿಕೊಡುತ್ತಾ ಮಾಸ್ತಿ ವೆಂಕಟೇಶ ಅಯಂಗಾರ್ ರವರು ಒಮ್ಮೆ ಹೀಗೆ ಹೇಳಿದರಂತೆ;“ನಾನು ತಮಿಳು ಕನ್ನಡಿಗ; ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಮ್ ಕನ್ನಡಿಗರು; ಆದರೆ ಅ.ನ. ಕೃಷ್ಣರಾಯರು ಅಚ್ಚ ಕನ್ನಡಿಗರು”. ಕನ್ನಡಿಗರಲ್ಲಿ ಕನ್ನಡಿಗರಾದ ಮಾಸ್ತಿಯವರಿಂದ ಬಂದ ಈ ಪ್ರಶಂಸೆಯ ಮಾತು ಅನಕೃ ಅವರ ಕನ್ನಡತನಕ್ಕೆ ಹಿಡಿದ ಕನ್ನಡಿ. ಕನ್ನಡ ಸಾಂಸ್ಕೃತಿಕ ಜೀವನವನ್ನು ವಿಸ್ತಾರಗೊಳಿಸಿರುವ ಅನಕೃ ಅವರ ಪ್ರತಿಭೆ, ದುಡಿಮೆ, ಸಾಧನೆ, ಸಿದ್ಧಿ ಇವುಗಳಿಗೆ ನ್ಯಾಯವಾಗಿ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದು ಈಗ ಕನ್ನಡಿಗರ ಪಾಲಿನ ಹೊಣೆಯಾಗಿದೆ. ಈ ಬರಹದ ದೆಸೆಯಿಂದ ಈಗಿನ ಕನ್ನಡಿಗರು ಅನಕೃ ಸಾಧನೆಗಳ ಬಗ್ಗೆ ಸ್ವಲ್ಪ ಯೋಚಿಸುವಂತಾದರೆ ಈ ಬರಹ ದ ಉದ್ದೇಶ ಈಡೇರಿದಂತೆ.

[ರಸಚೇತನ ದಿಂದ ಸಂಗ್ರಹಿಸಿದ್ದು]