|
“ಕನ್ನಡಲೋಕ” ದ ಬಗ್ಗೆ ಹಿಂದೆ ಬರಹ ೨೦೦೦ ತಂತ್ರಾಂಶವನ್ನು ಮಾಡಿದಾಗ ಅದರಲ್ಲಿ ಕನ್ನಡದಲ್ಲಿ ಬರೆಯುವ ಜತೆ ಜತೆಗೆ ಅಂತರ್ಜಾಲದಿಂದ ಕನ್ನಡ ಸುದ್ದಿಗಳನ್ನು ಇಳಿಸಿಕೊಂಡು ಓದುವ ತಂತ್ರವನ್ನು ಅಳವಡಿಸಲಾಗಿತ್ತು. ಕನ್ನಡ ಬರಹ, ಬರಹಗಾರರಿಗೆ ಹೆಚ್ಚಿನ ಪ್ರಚಾರ ಸಿಗಬೇಕೆಂಬ ಉದ್ದೇಶದಿಂದ ಶುರುಮಾಡಿದ ಆ “ಕನ್ನಡ ಪುಟ” ದಲ್ಲಿ ಮೊದಲಿಗೆ ಶ್ರೀ ಹರಿಹರೇಶ್ವರ ಅವರು ಕೆಲವು ಲೇಖನಗಳನ್ನು ಬರೆದುಕೊಟ್ಟರು. ಶ್ರೀ ಕೆ.ವಿ. ನಾರಾಯಣ ಬರೆದು ಕಳಿಸುತ್ತಿದ್ದ “ಹೊಸಪದ” - ಕನ್ನಡದಲ್ಲಿ ಹೊಸ ಪದ ಪ್ರಯೋಗ ಕುರಿತಾದ ಬರಹಗಳೂ ಪ್ರಕಟಗೊಂಡವು. ಆದರೆ ನಿಯಮಿತವಾಗಿ ಬರಹಗಳು ಬರದಿದ್ದ ಕಾರಣ “ಕನ್ನಡ ಪುಟ” ವನ್ನು ಸ್ವಲ್ಪವೇ ಸಮಯದ ನಂತರ ನಿಲ್ಲಿಸಬೇಕಾಯಿತು. ಇತ್ತೀಚೆಗೆ ಕನ್ನಡ ಬ್ಲಾಗ್ಗಳ ಬೆಳವಣಿಗೆಯನ್ನು ನೋಡಿದಾಗ ಬರಹದ ಹಳೆಯ ಉದ್ದೇಶಕ್ಕೆ ಹೊಸರೂಪ ಕೊಡುವ ಒಂದು ಅವಕಾಶ ದೊರೆತಿದೆ. ಕನ್ನಡ ಅಕ್ಷರಲೋಕಕ್ಕೆ ಬ್ಲಾಗ್ ತಂತ್ರಜ್ಞಾನ ವರದಾನವಾಗಿದೆ. ಅನೇಕ ಹೆಸರಾಂತ ಲೇಖಕರು, ಪತ್ರಿಕೋದ್ಯಮಿಗಳು, ಹವ್ಯಾಸಿ ಬರಹಗಾರರಿಂದ ಕನ್ನಡ ಬ್ಲಾಗ್ ಲೋಕ ತುಂಬಿಹೋಗಿದೆ. ಹೊಸ ಬರಹಗಾರರಿಗಂತೂ ಬೆನ್ನುತಟ್ಟಿ ಹುರಿದುಂಬಿಸುತ್ತೆ. ಬರೆಯಲು ಆಕರ್ಷಣೆ, ಆಮಿಷವನ್ನು ಒಡ್ಡುತ್ತದೆ. ಇಂದು ಕನ್ನಡದಲ್ಲಿ ಪ್ರತಿನಿತ್ಯ ಕನಿಷ್ಠ ೨೫ ಲೇಖನಗಳಾದರೂ ಬ್ಲಾಗಿಸಲ್ಪಡುತ್ತವೆ. ಮುಂದೊಂದು ದಿನ ದಿನನಿತ್ಯ ಬ್ಲಾಗುಗಳಲ್ಲಿ ತಯಾರಾಗುವ ಒಟ್ಟು ಮಾಹಿತಿ ಪತ್ರಿಕೆಗಳಲ್ಲಿ ಬರುವ ಸುದ್ದಿಯ ಮೊತ್ತವನ್ನು ಮೀರುತ್ತದೆಯಾ? ಮೀರಬಹುದೇನೋ. ಒಂದಷ್ಟು ಬ್ಲಾಗುಗಳನ್ನು ಸೇರಿಸಿ ಪತ್ರಿಕೆಯೊಂದನ್ನೂ ಮಾಡುವ ಕಾಲ ಬರಬಹುದೇನೋ!? (ಟೆಲೆವಿಷನ್ ಬದಲು ಯೂಟ್ಯೂಬ್ ನೋಡುವ ಅಥವಾ ಯೂಟ್ಯೂಬ್ ಅನ್ನು ಟೆಲೆವಿಷನ್ ನಲ್ಲೇ ನೋಡುವ ಕಾಲ ಬಂದರೂ ಬರಬಹುದು!) ಬ್ಲಾಗುಗಳಲ್ಲಿ “ಏನು” ಬೇಕಾದರೂ ಬರೆಯಬಹುದಾದರೂ ಕನ್ನಡ ಬ್ಲಾಗುಲೋಕ ಸಭ್ಯತೆಯ ಎಲ್ಲೆ ದಾಟಿಲ್ಲ. ಅತಿ ಗಾಂಭೀರ್ಯದಿಂದ ಹಿಡಿದು ಟೈಮ್ಪಾಸ್ ಗಾಗಿ ಬರೆಯುವ ನಮ್ಮ ಬರಹಗಾರ ಬಳಗದಲ್ಲಿ ಜವಾಬ್ದಾರಿಯಿಂದ, ಸೌಜನ್ಯದಿಂದ ಬರೆಯುವವರೇ ಹೆಚ್ಚು. ಈಗ ಇಂತಹ ನೂರಾರು ಬ್ಲಾಗುಗಳಲ್ಲಿ ಪ್ರಕಟಗೊಳ್ಳುವ ಲೇಖನಗಳನ್ನು ಒಗ್ಗೂಡಿಸಿ RSS Feed ಮೂಲಕ ಸಂಗ್ರಹಿಸಿ “ಕನ್ನಡಲೋಕ” ಎಂಬ ಹೆಸರಿನಡಿಯಲ್ಲಿ ಪ್ರಕಟಿಸಲಾಗುತ್ತಿದೆ. ಕನ್ನಡಿಗರು ಪ್ರತಿ ಬಾರಿ ಬರಹ ಉಪಯೋಗಿಸಿದಾಗ ಆಗಿನ ಹೊಸ ಲೇಖನಗಳು ಕಾಣಿಸಿಕೊಳ್ಳುತ್ತವೆ. (ಬರಹ ತಂತ್ರಾಂಶದಲ್ಲಿ ಕನ್ನಡಲೋಕ ಕಾಣಿಸಿಕೊಳ್ಳಬೇಕಾದರೆ ಬರಹದ ಮೆನುನಲ್ಲಿ “Settings --> Other...” ಕ್ಲಿಕ್ ಮಾಡಿ “Enable Internet news” ಆಯ್ದುಕೊಳ್ಳಬೇಕು.) ಅಥವಾ ಬ್ರೌಸರ್ ನಲ್ಲೇ ನೇರವಾಗಿ “ಕನ್ನಡಲೋಕ” ನೋಡಬಹುದು. ಇಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು, ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮದೂ ಒಂದು ಕನ್ನಡ ಬ್ಲಾಗ್ ಇದ್ದರೆ ಅದನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ. ಶೇಷಾದ್ರಿವಾಸು ಚಂದ್ರಶೇಖರನ್ ೧೫ ಜುಲೈ ೨೦೦೭ |